ಕಳಸಬಂಡೂರಿ, ಕಾವೇರಿ ನೀರಿಗಾಗಿ ಚಿತ್ರರಂಗದಿಂದ ಸ್ಪಂದನೆ ಸಿಗುತ್ತಿಲ್ಲವೆಂಬ ಆರೋಪ ಕೇಳಿಬರುತ್ತಿತ್ತು. ಇದಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆಗಳು ಬಂದಿರಲಿಲ್ಲ. ಶುಕ್ರವಾರ ನಡೆದ ಕರ್ನಾಟಕ ಬಂದ್ನಲ್ಲಿ ವಾಣಿಜ್ಯ ಮಂಡಳಿ ಎದುರು ಬಹುತೇಕ ಕಲಾವಿದರು ಆಗಮಿಸಿ ಕಾವೇರಿಗೆ ನಮ್ಮ ಬೆಂಬಲ ಇದೆ ಎಂದು ವಿವಾದಕ್ಕೆ ತೆರೆ ಏಳೆಯುವಲ್ಲಿ ಸಪಲರಾದರು. ವಿಧಾನ ಪರಿಷತ್ ಸದಸ್ಯೆ ತಾರಾ ತಮ್ಮ ಮಾತಿನಲ್ಲಿ ಜಯಲಲಿತಾರವರು ಮೊದಲು ಮೆಟ್ಟೂರು ಡ್ಯಾಂನ್ನು ಸರಿಪಡಿಸಿ ಅಲ್ಲಿ ನೀರನ್ನು ಶೇಖರಿಸಿದರೆ ನಮ್ಮ ನೀರು ಅಗತ್ಯವಿರುವುದಿಲ್ಲ. ಅದು ಬಿಟ್ಟು ಸವೋಚ್ಚ ನ್ಯಾಯಾಲಯವು ಆದೇಶ ನೀಡಿದೆ ಎಂದು ನಮಗೆ ನೀರಿಲ್ಲದಿದ್ದರೂ ಕೊಡಿ ಎಂದು ಕೇಳುವುದು ಯಾವ ನ್ಯಾಯ. ನಾವೆಲ್ಲರೂ ನಿಮ್ಮ ಜೊತಗಿದ್ದೇವೆ ಎಂದರು. ನಾವುಗಳು ಇಂದು ಕಲಾವಿದರಾಗಿ ನೀರಿನ ಪರ ಹೋರಾಡಲು ಬಂದಿದ್ದೇವೆ. ಶಿಳ್ಳೆ,ಜೈಕಾರ ಅವಶ್ಯಕವಿಲ್ಲ. ಚಪ್ಪಾಳೆ ಹೊಡೆಯಿರಿ. ಪ್ರತಿ ಸಲ ತಮಿಳುನಾಡು ಗೆಲ್ಲುತ್ತಿದೆ. ಇದಕ್ಕೆ ನಾವುಗಳು ಮುಂದೇನು ಮಾಡಬೇಕೆಂದು ಯೋಚನೆ ಮಾಡಬೇಕೆಂದು ಹೇಳಿದ್ದು ಶೃತಿ. ಜಗ್ಗೇಶ್ ಕಾವೇರಿ ಮೂಲಕಾರಣದ ಬಗ್ಗೆ ವಿವರಿಸಿ ಅಮ್ಮ ಎಲ್ಲರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ. ಕಲಾವಿದರು ಬರುವುದಿಲ್ಲ ಅಂತ ತಪ್ಪು ಮಾಹಿತಿ ನೀಡಬೇಡಿ. ಸರಿಯಾದ ಸಮಯಕ್ಕೆ ನಾವುಗಳು ಬಂದೇ ಬರುತ್ತೇವೆ. ರಾಜ್ ಹೇಳಿದಂತೆ ಕನ್ನಡಕ್ಕೆ ತೊಂದರೆ ಬಂದಲ್ಲಿ ಟೊಂಕಕಟ್ಟಿ ನಿಲ್ಲುತ್ತೇವೆ ಎಂದರು.
ಭಾರತದೇಶ ಉತ್ತಮ ದೇಶವೆಂದು ಹೇಳಿರುವುದು ಅದು ಕರ್ನಾಟಕ, ಬೆಂಗಳೂರಿಗೆ. ನಾವುಗಳು ನೀರಿಗಾಗಿ ಹೊಡೆದಾಡುವುದು ಬೇಡ. ಕರ್ನಾಟಕ ಕಸ್ತೂರಿ ನಿವಾಸ ಅಂತಾರೆ. ಕೈನೀಡಿ ಅಭ್ಯಾಸವಾಗಿದೆಯೇ ಹೂರತು ಕೈಬೇಡಿಲ್ಲ. ಇಂದು ಅಂತಹ ಪರಿಸ್ಥತಿ ಬಂದಿದೆ. ಎಲ್ಲರೂ ಒಗ್ಗಟ್ಟಿನಿಂದ ಹೋರಾಡುವುದು ಸೂಕ್ತ ಎಂದು ಸಲಹೆ ಮಾತು ಶಿವರಾಂ ಅವರದಾಗಿತ್ತು. ಎಷ್ಟು ದಿವಸ ಈ ಹೋರಾಟ, ಪ್ರತಿ ಬಾರಿ ಅವರೇ ಗೆಲ್ಲುತ್ತಾರೆ. ಇದಕ್ಕೆ ಅಂತ್ಯ ಎಂದು ಪುನೀತ್ ಬೇಸರ ವ್ಯಕ್ತಪಡಿಸಿದರು. ಕನ್ನಡಿಗರು ವಿಶಾಲಹೃದಯದವರು ಅಂತಾರೆ. ಇನ್ನು ಮುಂದೆ ನಾವು ಗಂಡಸರಾಗೋಣ ಎಂಬ ಮಾತು ದರ್ಶನ್ರಿಂದ ಕೇಳಿಬಂತು. ಅವರವರ ಅಭಿಮಾನಿಗಳು ಜೈಕಾರ ಹಾಕುತ್ತಿದ್ದನ್ನು ಕಂಡು ಶಿವರಾಜ್ಕುಮಾರ್ ಇಂದು ನಾವೆಲ್ಲರೂ ನಮ್ಮ ಶಕ್ತಿ ಪ್ರದರ್ಶನ ತೋರಿಸಲು ಬಂದಿಲ್ಲ. ನಾವುಗಳು ನೀರಿಗಾಗಿ ಬಂದಿದ್ದೇವೆ. ಅದಕ್ಕೆ ಅಂತಲೇ ಬೇರೆ ಕಾರ್ಯಕ್ರಮ ಇದೆ. ಗೆದ್ದಾಗ ಜೈಕಾರ ಹಾಕೋಣ. ಇನ್ನು ಮುಂದೆ ಯೋಚನೆ ಮಾಡಿ ಒಳ್ಳೆ ಸರ್ಕಾರವನ್ನು ಆಯ್ಕೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಮುಂದಿನ ದಿನಗಳಲ್ಲಿ ಹೋರಾಟವನ್ನು ಮುಂದುವರೆಸಲು ಕೆಆರ್ಎಸ್ವರೆಗೂ ಪಾದಯಾತ್ರೆ, ಕಳಸಬಂಡೂರಿಗೆ ಹೋಗುವ ಇರಾದೆ ಇದೆ. ಜನರಿಂದ, ಜನರಿಗಾಗಿ, ಜನರಿಗೋಸ್ಕರ ಅಂತ ಮಾತಿಗೆ ವಿರಾಮ ಹಾಕಿದರು. ಅಮೂಲ್ಯ, ಪ್ರೇಮ, ಸಂಜನಾ, ಗಣೇಶ್, ದೇವರಾಜ್, ಪ್ರಜ್ವಲ್ದೇವರಾಜ್,ಶರಣ್, ರಚಿತಾರಾಂ, ಹರಿಪ್ರಿಯಾ, ಉಪೇಂದ್ರ, ಹಂಸಲೇಖಾ, ಭಾರತಿವಿಷ್ಣುವರ್ಧನ್, ಲೀಲಾವತಿ, ವಿನೋಧ್, ಅಜಯ್ರಾವ್, ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾಗೋವಿಂದು ಮತ್ತು ಹಲವರ ಒಕ್ಕರೂಲ ಧ್ವನಿ ಕಾವೇರಿ ಪರ ಆಗಿತ್ತು. ದೂರದ ಚಿತ್ರೀಕರಣದಲ್ಲಿದ್ದರಿಂದ ಸುದೀಪ್ ಗೈರು ಹಾಜರಿದ್ದರು.